
ಶಿಗ್ಗಾವಿ: ಮಳೆಗೆ ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮದ ಮಹಾದೇವಿ ತಳವಾರ ಎಂಬುವರ ಮನೆಗೆ ಹಾನಿಯಾದ ವಿಚಾರ ತಿಳಿದು ನಟ ವರುಣಗೌಡ ಅವರು ನೆರವು ನೀಡಿದ್ದಾರೆ. ಕಳೆದ ವಾರ ನಿರಂತರ ಮಳೆಗೆ ಕುನ್ನೂರು ಗ್ರಾಮದಲ್ಲಿ ಏಕಾಏಕಿ ಮನೆ ಗೋಡೆ ಕುಸಿದಿತ್ತು.ಈ ವೇಳೆ ರಾಮಪ್ಪ ತಳವಾರ ಎಂಬವರಿಗೆ ಗಾಯ ಸಹ ಆಗಿತ್ತು.ಮನೆ ಗೋಡೆ ಕುಸಿದ ಹಿನ್ನೆಲೆ ಗಣೇಶ ಹಬ್ಬಕ್ಕೆ ತಯಾರಿಸಿದ 300 ಗಣೇಶನ ಮೂರ್ತಿಗಳಿಗೆ ಹಾನಿಯಾಗಿ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು.ಈ ವಿಷಯ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ಶ್ಯಾಡಂಬಿ ಗ್ರಾಮದ ವರುಣಗೌಡ ಪಾಟೀಲ ಅವರು ತಮ್ಮ ಆಪ್ತರ ಮೂಲಕ ಮನೆ ಕಳೆದುಕೊಂಡ ಕುಟುಂಬಕ್ಕೆ ನಗದು ಸಹಾಯ ಮಾಡುವ ಮೂಲಕ ಆ ಕುಟುಂಬಕ್ಕೆ ಸ್ಥೈರ್ಯ ತುಂಬಿದ್ದಾರೆ. ಬೆಂಗಳೂರಿನಲ್ಲಿದ್ದರು ತಮ್ಮ ಅಭಿಮಾನಿ ಬಳಗದ ಮೂಲಕ ಸಹಾಯ ಮಾಡಿದ್ದಾರೆ. ಬೆಂಗಳೂರಿನಿಂದ ಬಂದ ಬಳಿಕ ಮತ್ತೊಮ್ಮೆ ಆ ಕುಟುಂಬಸ್ಥರನ್ನು ಭೇಟಿಯಾಗಿ ಅಗತ್ಯ ನೆರವು ನೀಡಲಾಗುವುದು ಎಂದು ವರುಣಗೌಡ ತಿಳಿಸಿದ್ದಾರೆ