ಹಾನಗಲ್: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿದ್ದು, ಹಲವರು ಜೀವ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಕೈ-ಕಾಲು ಮುರಿದುಕೊಂಡಿದ್ದಾರೆ.ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರನ್ನು ಆಕ್ರೋಶಕ್ಕೀಡುಮಾಡಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೇಕೌಂಶಿ ಗ್ರಾಮದ ನಿವಾಸಿಗಳಾದ ಬೈಕ್ ಮೆಕಾನಿಕಲ್ ಅಬ್ರಾರ್ ನೇಗಳೂರ, ಮಕಬುಲ್ ಲೋಹಾರ, ಸಿರಾಜ್ ಅಹ್ಮದ್ ಬೊಮ್ಮನಹಳ್ಳಿ, ಚಂದ್ರಗೌಡ ಓದೇಗೌಡರ, ವಿನಾಯಕ ತಳವಾರ ಗೌಸ್ ಅಹ್ಮದ್ ಶೀರಗೋಡ, ಜಪಾರ್ ಸಾಬ್ ಬ್ಯಾಡಗಿ ಅವರು ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದ ರಸ್ತೆ ಗುಂಡಿಯನ್ನು ಮುಚ್ಚಿ ತಾವೇ ದುರಸ್ತಿಗೊಳಿಸಿದ್ದಾರೆ.ಹಿರೇಕೌಂಶಿ
ಗ್ರಾಮದ ಹೊರವಲಯದಲ್ಲಿರುವ ಸಿರ್ಸಿ ಹರಿಹರ ರಾಜ್ಯ ಹೆದ್ದಾರಿಯಲ್ಲಿ ನಿರಂತರ ಮಳೆಯಿಂದಾಗಿ ದೊಡ್ಡ ಪ್ರಮಾಣದ ಗುಂಡಿ ಬಿದ್ದಿದ್ದು ರಸ್ತೆ ಗುಂಡಿಯಿಂದ ಹಲವಾರು ವಾಹನ ಸವಾರರು ಬಿದ್ದು ಕೈ ಕಾಲು ಮುರಿದುಕೊಳ್ಳುತ್ತಿರುದು ಸರ್ವೇಸಾಮಾನ್ಯವಾಗಿತ್ತು. ಇದರಿಂದ ಬೇಸತ್ತು ತಮ್ಮ ಸ್ವಂತ ಹಣದಿಂದ ಕಲ್ಲು ಸಿಮೆಂಟ್ ಉಸುಕು ತಂದು ರಸ್ತೆ ಗುಂಡಿ ಮುಚ್ಚಿ ಮಾದರಿಯಾಗಿದ್ದಾರೆ.